
ಅರಳು ಮರಳು ಅಂತಾರಲ್ಲ ಅದು ಅವ್ರ ಸಂಗೀತ ಶಕ್ತಿಗೆ ಹೆದರಿ ದೂರ ನಿಂತಿತ್ತೋ ಏನೋ...
ಗುರುಗೋಳು ಅನ್ನೂಕಿಂತ ಅಜ್ಜಿ ಅಂತನ ಮಾತಾಡ್ತ ಹೋದ್ರು ಕುಂದಗೋಳದ ಅಶೋಕ್ ನಾಡಗೇರ್.
----------------------
ಕಿಟ್ಟಕ್ಕಾರು ತೀರ್ಕೊಂಡ್ ಮ್ಯಾಲಂತೂ ಹಾಡೂದ ನಿಲ್ಲಿಸಿಬಿಟ್ಟಿದ್ರು. ಸೆಪ್ಟಂಬರ್ನೊಳಗ ನಮ್ಮ ಕುಂದಗೋಳ ವಾಡೆದಾಗ ಗಂಡಾಬಂಧ ಇಟ್ಕೊಂಡಿದ್ವಿ. ಬಾಬಣ್ಣ, ನಾರಾಯಣ (ಗಂಗೂಬಾಯಿಯವರ ಮಕ್ಕಳು) ಅವತ್ತ ಅಜ್ಜಿ ಹಾಡೂದು ಬ್ಯಾಡ. ಅಕಿಗೆ ಪ್ರಾಣಾಪಾಯ ಅದ ಅಂದ್ರು. ಆದ್ರ ಮೊಮ್ಮಗ ಮನೋಜ್ ಪಟ್ಟಬಿಡದ ಅಜ್ಜಿ ಕಡೀಂದ್ ಹಾಡಿಸೇ ಬಿಟ್ರು. ಆವತ್ತ ಅಭೋಗಿ ಹಾಡಿದ್ರು. ಆಮ್ಯಾಲಿಂದ ಅವ್ರಿಗೆ ಆತ್ಮವಿಶ್ವಾಸ ಬಂತು. ಮತ್ತ ಪಬ್ಲಿಕ್ನ್ಯಾಗ ಹಾಡ್ಲಿಕ್ಕೆ ಸುರು ಮಾಡಿದ್ರು. ಮುಂದ ೨೦೦೬ರೊಳಗ ಬೆಂಗಳೂರಿನ್ಯಾಗ ಚೌರಾಸಿಯಾ ಅವ್ರ ಜೊತಿನೂ ಹಾಡಿದ್ರು.
ಎರಡು ತಿಂಗಳ ಹಿಂದೆ ಯಡಿಯೂರಪ್ಪನವರು ಅಜ್ಜೀನ್ನ ಭೇಟಿಯಾಗ್ಲಿಕ್ಕೆ ಬಂದಿದ್ರು. ಆಗ ‘ಏನಾತು ಕುಂದಗೋಳದಾಗ ದೊಡ್ಡ ಸಭಾಂಗಣ ಕಟ್ಟಸೂದು?’ ಅಂತ ಅಜ್ಜಿ ಕೇಳಿದ್ರು. ಮುಖ್ಯಮಂತ್ರಿಗಳು ‘ಎರಡು ಕೋಟಿ ರೂಪಾಯಿ ಸ್ಯಾಂಕ್ಷನ್ ಮಾಡಿದ್ದೇನೆ’ ಅಂದ್ರು. ‘ಬರೀ ರೊಕ್ಕಾ ಕೊಟ್ರ ಸಾಲೂದಿಲ್ಲ. ಲಗೂನ ಕಟ್ಟಸ್ರಿ, ನಾ ಅದರೊಳಗ ಹಾಡಬೇಕು. ನಾ ತಿನ್ನೂ ಪ್ರತಿಯೊಂದ್ ಅಗಳಿನ ಋಣಾ ಆ ಕುಂದಗೊಳದ್ದು’ ಅಂತಂದ್ರು ಅಜ್ಜಿ. ಆಗ ಪತ್ರಕರ್ತರೆಲ್ಲಾ, ಅದೇನು? ಬರೇಬರೆ ಕುಂದಗೋಳ ಅಂತೀರಿ ಅಂತ ಕೇಳಿದ್ದಕ್ಕ ’ಕುಂದಗೋಳ ಮತ್ತ ತುಪ್ಪ ಇವೆರಡ ನನಗ ಸೇರ್ತಾವು’ ಅಂತ ಅಜ್ಜಿಯಂದ್ರು. ಅಜ್ಜಿ ಅಗದೀ ಮಿತಾಹಾರಿ. ಬಿಸಿಬಿಸಿ ಅನ್ನ, ಮೆಂತ್ರೆಹಿಟ್ಟು ಅನ್ನದಷ್ಟನ ತುಪ್ಪ!
ಮೊದ್ಲೇಕ ನನಗ ಅವ್ರು ಹೇಳಿಕೊಟ್ಟಿದ್ದು ಲಲತ್. ಮೂರು ವರ್ಷ ಹೇಳಿದ್ರು. ಒಮ್ಮೆ ಅವ್ರಿಗೆ ಕೇಳಿದೆ-‘ಎಲ್ಲಾರೂ ಭಾಗೇಶ್ರೀ ಹಾಡಬೇಕಾದ್ರ ಪಂಚಮ್ ಹಚ್ಚತಾರು. ಮತ್ತ ನೀವು ಪಂಚಮ್ ಯಾಕ್ ಹಚ್ಚೂದಿಲ್ಲ? ಹೀರಾಬಾಯಿ ಬಡೋದೇಕರ್, ಪ್ರಭಾ ಅತ್ರೆ, ಕಿಶೋರಿ ಅಮ್ಹೋಣ್ಕರ್ ಇವ್ರೆಲ್ಲಾ ಪಂಚಮ್ ಹಚ್ಚಿ ಹಾಡ್ತಾರು’ ಅಂತ. ಅದಕ್ಕವರು, ‘ನಮ್ಮ ಗುರುಗೋಳು ಸವಾಯಿ ಗಂಧರ್ವರು ಹಿಂಗ ಹಾಡಬೇಕು ಅಂತ ಹೇಳ್ಯಾರು. ನಮ್ಮ ಘರಾಣಾದಾಗ ಹಿಂಗ ಹಾಡಬೇಕು’ ಅಂತ ಖಡಕ್ ಆಗಿ ಹೇಳಿಬಿಟ್ರು.
ಪಾಠಕ್ಕ ಹೋದಾಗ ಅವತ್ತೊಂದಿನ ಅಢಾಣಾ ಹಾಡಿದೆ. ಯಾವತ್ತೂ ಏನೂ ಹಂಗೆಲ್ಲಾ ತಿನ್ಲಿಕ್ಕೆ ಕೊಟ್ಟಾವ್ರಲ್ಲ ಏನಲ್ಲ. ಭಾರೀ ಕಟ್ಟನಿಟ್ಟು ಶಿಷ್ಯಾರ ಜೊತಿ. ಏನೊಂದೂ ಉಣ್ಣು ತಿನ್ನು ಅಂತ ಯಾವತ್ತೂ ಅಂದಾವ್ರನೂ ಅಲ್ಲ. ಪ್ರಶಂಸಾ ಅಂತೂ ದೂರದ ಮಾತು. ಆದ್ರ ಅವತ್ತ ನಂಗ ಪೇಢೆ ಕೊಟ್ಟಬಿಟ್ರು ಅಜ್ಜಿ! ಭಾಳ ಖುಷಿ ಆತು. ಆಗ ನನಗ ಏನ್ ನೆನಪಾತಪಾ ಅಂದ್ರ... ‘ಕುಂದಗೋಳದಾಗ ಅಜ್ಜಿಯವ್ರ ಗುರುಗೋಳ ಮನೀ ಬಾಜೂಕ ಒಂದ ಹಾಲಿನ ಅಂಗಡಿ ಇತ್ತಂತ. ಯಾವತ್ತರ ಒಂದೊಂದ್ ದಿವ್ಸ್ ಪ್ರಾಕ್ಟೀಸ್ ಮುಗದ ಮ್ಯಾಲ ಹಾಲಿನ ಅಂಗಡಿಗೆ ಹೋಗಿ ಹಾಲು ಕುಡಸ್ತಿದ್ರಂತ ಅವ್ರ ಗುರುಗೋಳು. ಹಂಗ ಮಾಡಿದ್ ದಿವ್ಸ್ ಇವ್ರು ಅನಕೋತಿದ್ರಂತ. ತಾ ಹಾಡಿದ್ದು ಗುರುಗೋಳಿಗೆ ಸೇರೇದ ಅಂತ. ಹಂಗ ನನಗೂ ಅಜ್ಜಿ ಅವತ್ತ ಪೇಢೆ ಕೊಟ್ಟಾಗ ಅಂದಾಜು ಮಾಡಕ್ಒಂಡೆ, ಬಹುಶಃ ಅಜ್ಜಿಗೆ ನಾ ಹಾಡಿದ್ದು ಅವತ್ತ ಸೇರಿತ್ತು ಅಂತ.
ಮತ್ತ ಅಜ್ಜಿಗೆ ಅಷ್ಟ ವಿದ್ವತ್ ಇತ್ತು, ಎಲ್ಲಾ ಇತ್ತು, ಆದ್ರ ತನಗ ಗೊತ್ತಿಲ್ಲದ್ದನ್ನ ಗೊತ್ತಿಲ್ಲಂತ ಖಂಡತುಂಡವಾಗಿ ಹೇಳಿಬಿಡ್ತಿದ್ರು. ಒಮ್ಮೆ ಏನಾತು...ಹಿಂದೊಮ್ಮೆ ಕುಂದಗೋಳದೊಳಗ ಸವಾಯಿ ಗಂಧರ್ವರ ಪುಣ್ಯತಿಥಿ ಟೈಮಿನ್ಯಾಗ ಎಸ್. ಎಲ್. ಭೈರಪ್ಪನವ್ರು ಗೆಸ್ಟ್ ಆಗಿ ಬಂದಿದ್ರು. ರಾಜೀವ್ ತಾರಾನಾಥ್ ಆಗ ಚಾರುಕೇಶಿ ಬಾರಿಸಿದ್ರು. ಭೈರಪ್ಪನವ್ರು ಅಜ್ಜಿಗೆ, ಚಾರುಕೇಶಿ ಯಾವ ಥಾಟ್? ಅಂತ ಕೇಳಿದ್ರು. ಅಜ್ಜಿ ’ನನಗ ಗೊತ್ತಿಲ್ಲಪ್ಪ’ ಅಂತ ಸಜೀಕ ಹೇಳಿದ್ರು. ಹಂಗ ನೋಡಿದ್ರ ಅಜ್ಜಿ ಏನೋ ಒಂದು ಹೇಳಿಬಿಡಬಹುದಾಗಿತ್ತು. ಆದ್ರ ಹಂಗ ಮಾಡ್ಲಿಲ್ಲ ಅವ್ರು.
ಅಷ್ಟ ಖಡಕ್, ಜೋರ್, ಸರಳ ಇದ್ದ ಅಜ್ಜಿನ್ನ ಅಳಸಬೇಕಂದ್ರ ಅವ್ರ ಅವ್ವನ ನೆನಪ ತಗೀರಿ ಸಾಕು ಅಂತ ಅಜ್ಜಿ ಬಗ್ಗೆ ಡಾಕ್ಯುಮೆಂಟರಿ ತಗದ ವಿಜಯಾ ಮುಳೆಯವ್ರು ಅನ್ನೋವ್ರು. ನನ್ನ ಸಲವಾಗಿ ಎಲ್ಲಾ ತ್ಯಾಗ ಮಾಡಿ ನಮ್ಮವ್ವ ಹೊಂಟ್ಹೋದ್ಲು. ನಾ ಇಷ್ಟೆಲ್ಲಾ ಹೆಸರ ಗಳಿಸಿದೆ. ಸಾಧನಾ ಮಾಡಿದೆ. ಪ್ರಶಸ್ತಿಬಂದು, ಆದ್ರ ಅಕಿ ಅದನ್ನೆಲ್ಲಾ ನೋಡ್ಲೇ ಇಲ್ಲ ನೋಡು ಅಂತ ಕಣ್ಣೀರ ಹಾಕೋವ್ರು.
ಅಜ್ಜಿ ಕೊನೀಸಲ ಹುಬ್ಬಳ್ಯಾಗ ಅಡ್ಮಿಟ್ ಆಗೂ ಹಿಂದಿನ ದಿವಸ ಪಾಠಕ್ಕ ಹೋಗಿದ್ದೆ. ಪಾಠ ಅಂದ್ರ ಅವ್ರ ಮನೀಗ್ ಹೋಗಿ ಇಡೀ ದಿವ್ಸ ಹಾಡ್ಕೋತ ಕೂಡುದು. ಬೆಳಗ್ಗೆ ತೋಡಿ, ಮಧ್ಯಾಹ್ನ ಮುಲ್ತಾನಿ, ಹಿಂಗ ಆಯಾ ಟೈಮಿಗೆ ಅದದ ರಾಗಾನ ಹಾಡಬೇಕು. ಅವತ್ತ ಅಭೋಗಿ ಹಾಡಿ ಮುಗಿಸಿದ ಮ್ಯಾಲ ಬಸಂತ ಹಾಡ್ಕೋತ ಕೂತೆ. ಹಗೂರಕ ಬಾತ್ರೂಂ ಹೊಂಟನಿತಾವ್ರು, ಹೊಳ್ಳು ಬಂದು ಬಸಂತದ ಒಂದು ಸಂಗತಿ ಹಾಡಿತೋರ್ಸಿ, ಬಸಂತ ರಾಗಕ್ಕ ಈ ಸ್ವರಸಂಗತಿನ ಜೀವ. ಅಬ್ದುಲ್ ಕರೀಂ ಖಾನರ ’ಪಿಯಾ ಸಮಗ ಖೇಲೋರೆ..’ ಕೇಳೀಯಿಲ್ಲ? ಆ ರೆಕಾರ್ಡಿಂಗ್ನ್ಯಾಗ ಅವ್ರ ಇದನ್ನ ಹಾಡ್ಯಾರು ನೋಡು ಅಂತಂದ್ರು. ಅರಳು ಮರಳು ಅಂತಾರಲ್ಲ ಅದು ಅವ್ರ ಸಂಗೀತದ ಶಕ್ರಿಗೆ ಹೆದರಿ ದೂರ ಇಂತಿತ್ತೋ ಏನೋ...