ನಿನ್ನೆಯ ನೆನಪಿಲ್ಲ
ಸುಳಿವಿಲ್ಲ ನಾಳೆಯದು
ಚೌಕಟ್ಟಿನೊಳಗೆ ವರ್ತಮಾನ ಚಿತ್ರ
ಎದುರಾದ ಗಳಿಗೆಯತ್ತಲಷ್ಟೇ ಚಿತ್ತ.
ತೋಯ್ದರೂ ಕಣ್ಣಂಚ
ಮಿಂಚಿದರೂ ಇಂಚು ಕಣ್ಣ
ಕಂಡವರ ಕಣ್ಣೊಳಗೇ.
ಕತ್ತಲೆಯ ಬೆನ್ನಿಗೆ
ಬೆಳಗ ತಂತಿ ಎಳೆದು
ಐಕ್ಯ ಸ್ವರದೊಳಗೆ;
ಕಾವು ಬೇಡದ
ಹದವರಿದ ನಾದವದು
ಕಾಣದೆದೆಯೊಳಗೆ
ಜೀವಬಂಧಿ.
ತಿಳಿಮುಗಿಲ ಮಡಿಲಲಿ
ಮೈಮುರಿದ ಬೆಳ್ಮೋಡಕೆ
ರಾಗವದು ಸಂಜೆಗೆ;
ನೀರಲ್ಲ ಕದಡಲು
ಅಬ್ಬರಿಸಲು ಕಡಲಲ್ಲ
ಅಲ್ಲವೇ ಅಲ್ಲ
ಇನಿಯನ ಕಣ್ಣಂತೂ.
ನೆತ್ತಿ ಅಡವಿಟ್ಟು,
ತೊಡೆ ಒತ್ತಿಕೊಂಡು
ಎದೆ ಹರಡಿ
ಬೆನ್ನು ತೋರಿಸದ
ಕನ್ನಡಿಯದು;
ಅಲ್ಲ ಮಾಯಾವಿ
ಮೂರೂ ಹೊತ್ತು
ಇದರದೇ ಚಿಂತೆ
ನಿಂತಿಲ್ಲ ಉಸಿರು
ಬಾಡಿಲ್ಲ ಹಸಿರು
ಒಣ ಸೌದೆಯೊಳಗೂ
ಹೊತ್ತಿಲ್ಲ ಚಿತೆ.
ಊರಾಚೆ ಬಿಟ್ಟ
ಬೆಕ್ಕಿನಂತೆ
ಮತ್ತೆ ಮತ್ತೆ ಮನೆಯತ್ತ
ಮನದತ್ತ,
ಆಳಕ್ಕಿಳಿದು
ಮೇಲಕ್ಕೆ ತೇಲಿ
ಅಲ್ಲೆಲ್ಲೋ ತ್ರಿಶಂಕುವಾಗಿ
ಬದುಕಿಲ್ಲ, ಸತ್ತಿಲ್ಲ
ದೆವ್ವವೂ ಆಗಿಲ್ಲ
-ಶ್ರೀದೇವಿ ಕಳಸದ
6 comments:
ಊರಾಚೆ ಬಿಟ್ಟ
ಬೆಕ್ಕಿನಂತೆ
ಮತ್ತೆ ಮತ್ತೆ ಮನೆಯತ್ತ
ಮನದತ್ತ,
-ಸಾಲು ಬಹಳ ಇಷ್ಟವಾಯಿತು...
thumba chennagidhe sri..
ಮಾಯಾವಿ ಚೆ೦ದದ ಕವನ.
ಶುಭಾಶಯಗಳು
ಅನ೦ತ್
maayaavi,
chenda kavana
arthapoornavaagide
ಮಾಯಾವಿ ಸೊಗಸಾಗಿದೆ!
Tumba chennagide kavite. Bahala aaptavaayitu.
-Vinay
Post a Comment