ಒಂದಾದರು ಇಲ್ಲಿ.
ಕಳಚಿ ನಾಮ, ಬಿಸುಟು ದಾರ
ಮರೆತು ಹೆಣ್ಣು-ಗಂಡೆಂಬುದ,
ಬೆತ್ತಲಾದರು ಬಟ್ಟೆಯಿದ್ದರೂ
ಕತ್ತಲಲ್ಲೂ ಬೆಳಕಾದರು
ಸುಟ್ಟಿದ್ದು ಮಾಂಸ, ಮೂಳೆಯಷ್ಟೇನಾ?
ಹೌದಂತೆ ಬಂಧನವೂ
ಹಂಬಲಿಸಿದ್ದರು ಯಾವುದಕ್ಕೆಲ್ಲ
ಪರದಾಡಿದ್ದರು, ಪಡೆದಿದ್ದರು
ಎಲ್ಲ ಮರೆತರವರಂತೆ
ಮಲಗಿ, ಉರಿದು ಮರೆಯಾದರು
ಸಿಗದಂತೆ ಮತ್ತೆ
ಚಿತೆಗೆಂಥದದು ಚಿಂತೆ?
ಆರಿಸುವುದಿಲ್ಲ ಕಣ್ಣೀರು ಉರಿ
ಕಣ್ಣೀರಿಡುವುದಿಲ್ಲ ಕೆನ್ನಾಲಗೆ
ಮೈಯೆಲ್ಲ ಕೈಕಾಲಿನ ಬೆಂಕಿ
ಎಲ್ಲವನ್ನೂ ನುಂಗಿ ನೊಣೆಯುವಾಗ
ಭವಬಂಧನಗಳು ಯಾವ ಲೆಕ್ಕ ಮರುಳೆ
ಗೊತ್ತಿದ್ದೂ ಎಲ್ಲ
ಬೆದರುವುದಿಲ್ಲ ಬೆಂಕಿಗೆ ಬದುಕು
ಚಿಂತಿಸುವುದಿಲ್ಲ ಚಿತೆಗೂ
ಕೆರಳುತ್ತದೆ ಮತ್ತೆ ಮತ್ತೆ
ಹೊರಳುತ್ತದೆ
ಕತ್ತಲ ಜಾರುದಾರಿಯಲ್ಲಿ
ಹೊರಡುತ್ತದೆ ಗುರಿಯಿಟ್ಟಂತೆ
ತಾಕುತ್ತದೆ, ತಣಿಯುತ್ತದೆ
ಬೇರಗರ್ಭದಲ್ಲೊಂದು
ಕಣ್ತೆರೆಯುತ್ತದೆ ಬೆಳಕು
ಕತ್ತಲಾಳದಲ್ಲಿ ಮೊಳಕೆಯೊಡೆವ ಬದುಕಿಗೆ
ಹುಟ್ಟಿನಿಂದ ಚಟ್ಟದವರೆಗೂ
ನಿತ್ಯ ಬೆಳಕಿನದೇ ಧ್ಯಾನ
ಚಿತೆಯಲ್ಲಿ ಬೆಳಕೂ ಮೌನ.
-ಶ್ರೀದೇವಿ ಕಳಸದ
-ಶ್ರೀದೇವಿ ಕಳಸದ
2 comments:
ಖರೆ ಹೇಳಿದಿರಿ!
ಸಾವಿನ ಸಚಿತ್ರ ಕವನ.
ನನ್ನ ಬ್ಲಾಗಿಗೂ ಬನ್ನಿ:
www.badari-poems.blogspot.com
Post a Comment